udayanews

ಮಂಗಳವಾರ, ಮಾರ್ಚ್ 23, 2021

ಬೆಲೆಯಿಲ್ಲದೆ ಕಂಗಾಲು :ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡಿ ಕೋಸು ಕಿತ್ತು ಹಾಕಿದ ರೈತ


 ಚಿಕ್ಕಮಗಳೂರು :ಬೆಲೆ ಇಲ್ಲದೆ ಕಂಗಾಲಾದ ಕೋಸು ಬೆಳೆದ ರೈತರೊಬ್ಬರು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿ ಕೋಸನ್ನು ಕಿತ್ತು ಹಾಕಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ನಡೆದಿದೆ 

ಹಿರೇಗೌಜದ ಬಸವರಾಜು ಎಂಬುವರು ತನ್ನ 1ಎಕರೆ ಜಮೀನಿನಲ್ಲಿ ಸುಮಾರು ೪೦ ಸಾವಿರ  ರೂ ವೆಚ್ಚ ಮಾಡಿ ಕೋಸನ್ನು ಹಾಕಿದ್ದರು .

    ಕೋಸು ಬೆಳೆದು ಕಟಾವಿಗೆ ಬಂದಿದ್ದು ಸೂಕ್ತ ಬೆಲೆ ಇಲ್ಲದೆ ಉತ್ಪಾದನಾ ವೆಚ್ಚವು ಸರಿದೂಗಿಸಲು ಅಸಾಧ್ಯವಾಗಿದೆ . ಇದರಿಂದ ಬೇಸತ್ತ ರೈತ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಕೋಸನ್ನು ನೆಲಸಮ ಮಾಡಿ ಆಕ್ರೋಶ ಹೊರಹಾಕಿದ್ದಾರೆ .

ಸರ್ಕಾರದ ತಪ್ಪು ನೀತಿ ,ದಲ್ಲಾಳಿಗಳ ಹಾವಳಿಯಿಂದ ಅತ್ತ ರೈತರಿಗೆ  ಸೂಕ್ತ ಬೆಲೆ ಸಿಗುತ್ತಿಲ್ಲ .ಇತ್ತ ಕಡಿಮೆ ಬೆಲೆಗೆ ಗ್ರಾಹಕರಿಗೆ ವಸ್ತುಗಳು ಎಟಕುತ್ತಿಲ್ಲ  .

ಸೋಮವಾರ, ಮಾರ್ಚ್ 22, 2021

4 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಚಿಕ್ಕಮಗಳೂರು,ಮಾ,೨೨:- ಕರ್ನಾಟಕ ಪವರ್ ಕಾರ್ಪೋರೇಷನ್, ಯುಪಿಸಿಲ್ ಮತ್ತು ಕೆಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ  ತಾಂತ್ರಿಕ ದೋಷ  ಕಂಡು ಬಂದಿದ್ದು ೪ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ .

 ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳಲ್ಲಿ ವಿದ್ಯುತ್ ಜಾಲದ ಸುರಕ್ಷತೆಯ ದೃಷ್ಠಿಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬರಬಹುದು ಎಂದಿದೆ .

ನೀರಾವರಿ ಪಂಪ್‌ಸೆಟ್‌ಗಳಿಗೆ ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆ ಹಾಗೂ ಮಧ್ಯರಾತ್ರಿಯಿಂದ ಬೆಳಿಗ್ಗೆ ೪ ಗಂಟೆಯವರೆಗೆ ಮಾತ್ರ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ. 

ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ.

ರಾಜ್ಯದ ವಿದ್ಯುತ್ ಜಾಲವು ಒಟ್ಟು ೪,೨೮೧ ಎಂ.ಡಬ್ಲ್ಯೂ ನಷ್ಟು ಪ್ರಮಾಣದ ವಿದ್ಯುತ್ ಕೊರತೆ ಎದುರಿಸುತ್ತಿದೆ. ಇದರಿಂದ ಮೆಸ್ಕಾಂಗೆ ಹಂಚಿಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಸುಮಾರು ೨೦೦ ಎಂಡಬ್ಲ್ಯೂನಷ್ಟು ಕೊರತೆಯಾಗುವ ಸಂಭವವಿದೆ ಎಂದು ಮೆಸ್ಕಾಂ ಹೇಳಿದೆ .


ಭಾನುವಾರ, ಮಾರ್ಚ್ 21, 2021

ಮೀಸಲು ಅರಣ್ಯ ಪ್ರಸ್ತಾವನೆ ಹಿಂದೆ ಪಡೆಯಲು ಒತ್ತಾಯ


 ಚಿಕ್ಕಮಗಳೂರು :ರಾಜ್ಯ ಸಚಿವ ಸಂಪುಟದ ಮುಂದಿರುವ ಮುಳ್ಳಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಪ್ರಸ್ತಾವನೆಯನ್ನು ಹಿಂದೆ ಪಡೆಯುವಂತೆ ಹೋರಾಟ ಸಮಿತಿ ಒತ್ತಾಯಿಸಿದೆ .

ಈ ಭಾಗದ ಅರಣ್ಯದಲ್ಲಿರುವ ಜನವಸತಿ ಪ್ರದೇಶಗಳ ಪುರಾವೆಗಳನ್ನು ಗಮನಿಸಿ ಧೃಢ ಪಡಿಸಿಕೊಂಡು ಸೂಕ್ತ ಪರಿಹಾರ ನೀಡುವಂತೆ ಸಮಿತಿ ಆಗ್ರಹಿಸಿದೆ .

ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ15,897 ಎಕರೆಯನ್ನು ಸಂಪುಟದ ಅನುಮೋದನೆಗಾಗಿ ಜಿಲ್ಲಾಡಳಿತ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ  ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಮಿತಿ ಪ್ರಧಾನ ಸಂಚಾಲಕ ವಿಜಯಕುಮಾರ್ ಆರೋಪಿಸಿದ್ದಾರೆ .

ಸಮಿತಿಯ ಹೋರಾಟದ ಫಲವಾಗಿ 5ಸಾವಿರ ಎಕರೆ ಪ್ರದೇಶವನ್ನು ಕೈಬಿಡಲಾಗಿದ್ದರೂ ಯಾವ ಸರ್ವೆ ನಂಬರ್  ಎಂಬುದನ್ನು ಸ್ಪಷ್ಟಪಡಿಸಿಲ್ಲ .  ಈ ವಿಷಯದಲ್ಲಿ ಅನೇಕ ಗೋಜಲು ಗಳಿದ್ದು ಸೂಕ್ತ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ .

ಶನಿವಾರ, ಮಾರ್ಚ್ 20, 2021

೨೩ ಕೆರೆ ತುಂಬಿಸುವ ಯೋಜನೆಗೆ ೪೧೮ ಕೋಟಿ ರೂ ಮಂಜೂರು :ಶಾಸಕ ಸುರೇಶ್

 


ಚಿಕ್ಕಮಗಳೂರು.ಮಾ.೨೦: ಲಿಂಗದಹಳ್ಳಿ ಹೋಬಳಿಯಲ್ಲಿರುವ ೨೩ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ೪೧೮ ಕೋಟಿ ರೂ. ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲಿ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಟೆಂಡರ್ ಕರೆದು ಚಾಲನೆ ನೀಡಲಾಗುವುದು ಎಂದು ತರೀಕೆರೆ ಶಾಸಕ ಸುರೇಶ್ ತಿಳಿಸಿದ್ದಾರೆ .

 ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಲಿಂಗದಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸಲು  ಭದ್ರಾ ಉಪ ಕಣಿವೆಯಿಂದ ತರೀಕೆರೆ, ಬೀರೂರು, ಕಡೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ೧,೨೮೧ ಕೋಟಿ ರೂ. ಮಂಜೂರಾಗಿದೆ ಎಂದರು .

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ , ತಹಸೀಲ್ದಾರ್ ಗೀತಾ  ಮಾತನಾಡಿದರು.

 ಮೂಲ ಸೌಕರ್ಯ- ಸಮಸ್ಯೆಗಳ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕೋವಿಡ್-೧೯ ಸಂಬಂಧಿಸಿದಂತೆ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾಮಣಿ, ಉಪಾಧ್ಯಕ್ಷ ರಮೇಶ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ನಾರಾಯಣಮೂರ್ತಿ, ತರೀಕೆರೆ ವಿಭಾಗದ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್  ಉಪಸ್ಥಿತರಿದ್ದರು.


ಚಿಕ್ಕಮಗಳೂರು: ಚಲನ್ ಗೋಲ್ಮಾಲ್ :೩೦ ಪ್ರಕರಣ ಬೆಳಕಿಗೆ


 ಚಿಕ್ಕಮಗಳೂರು :ಇಲ್ಲಿನ ನಗರಸಭೆಯಲ್ಲಿ ನಡೆದಿರುವ ಆಸ್ತಿ ತೆರಿಗೆ ಪಾವತಿ ಚಲನ್ ಮೇಲೆ ನಕಲಿ ಸೀಲು ,ಸಹಿ ಹಾಕಿ ಹಣ ಗುಳುಂ ಮಾಡಿದ ೩೦ ಪ್ರಕರಣಗಳು ಬೆಳಕಿಗೆ ಬಂದಿವೆ.

ಚಲನ್ ಒಂದರಲ್ಲಿ ದಿನಾಂಕ ಮತ್ತು ಮೊಹರಿನ ದಿನಾಂಕದಲ್ಲಿ ಕಂಡುಬಿಟ್ಟೆ ವ್ಯತ್ಯಾಸದಿಂದ ಈ ಹಗರಣ  ಬೆಳಕಿಗೆ ಬಂದಿತ್ತು .

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರಸಭೆ ಆಯುಕ್ತ ಬಿ ಸಿ ಬಸವರಾಜ್  ಪರಿಶೀಲನೆ ನಡೆಸಲು ಸೂಚನೆ ನೀಡಿದ್ದು ೩೦ ಪ್ರಕಣಗಳು ಪತ್ತೆಯಾಗಿವೆ .

ಈ ಸಂಬಂಧ ಬಿಲ್ ಕಲೆಕ್ಟರ್ ಶ್ಯಾಮ್ ಹಾಗೂ ಗುತ್ತಿಗೆದಾರ ಕೇಶವ ವಿರುದ್ಧ ನಗರ ಠಾಣೆಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ .

ಕೇಶವ್ ಆಡಳಿತ ಬಿಜೆಪಿ ಪಕ್ಷದ ಸಕ್ರಿಯ ಸದಸ್ಯನಾಗಿದ್ದು ರಕ್ಷಣೆಗೆ ತೆರೆಮರೆಯ ಯತ್ನ ,ಒತ್ತಡಗಳು ಗಳು ನಡೆದಿವೆ .

ಈ ಮಧ್ಯೆ ಜಿಲ್ಲಾಧಿಕಾರಿಗಳು ನಗರಸಭೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಮುಂದಿನ ಕ್ರಮದ ಜೊತೆಗೆ ಬಿಲ್ ಕಲೆಕ್ಟರ್ ಶ್ಯಾಮ್ ನನ್ನು ಅಮಾನತು ಮಾಡುವಂತೆ ಸೂಚನೆ ನೀಡಿದ್ದಾರೆ  

ಶುಕ್ರವಾರ, ಮಾರ್ಚ್ 19, 2021

ವಿದ್ಯುತ್ ಅವಘಡ: ಸುಟ್ಟು ಕರಕಲಾದ ಮನೆ


 ಚಿಕ್ಕಮಗಳೂರು :ಬದುಕಿನ ನಿರ್ವಹಣೆಗೆ ಸಣ್ಣ ಹೋಟೆಲ್ಲನ್ನು ಇಟ್ಟುಕೊಂಡಿದ್ದ  ಜಯನಗರದ ರೂಪಾ ಅವರ ಮನೆಗೆ ಇಂದು ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ .

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ .ಕ್ಷಣಮಾತ್ರದಲ್ಲಿ ಬೆಂಕಿ ಮನೆಯನ್ನು ಆವರಿಸಿತು. ಅಕ್ಕಪಕ್ಕದವರು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ .

ಇತರ ಮನೆಗಳಿಗೂ ಬೆಂಕಿ ಹರಡುವ ಸಾಧ್ಯತೆಗಳಿದ್ದವು , ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬಹಳಷ್ಟು ವಸ್ತುಗಳು ಸುಟ್ಟು ಕರಕಲಾಗಿ ಹೋಗಿ ಭಾರಿ ನಷ್ಟ ಸಂಭವಿಸಿದೆ .

ಬುಧವಾರ, ಮಾರ್ಚ್ 17, 2021

ನಗರಸಭೆಯಲ್ಲಿ ಹಣ ದುರ್ಬಳಕೆ: ಇಬ್ಬರು ಅಂದರ್


 ಚಿಕ್ಕಮಗಳೂರು :ಇಲ್ಲಿನ ನಗರಸಭೆಯಲ್ಲಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ .

ನಗರಸಭೆ ಆಯುಕ್ತ ಬಸವರಾಜ್ ನೀಡಿದ ದೂರನ್ನು ಆಧರಿಸಿ ಕಂದಾಯ ಸಿಬ್ಬಂದಿ ಶ್ಯಾಮ್ ಹಾಗೂ ಬ್ರೋಕರ್ ಗುತ್ತಿಗೆದಾರ ಕೇಶವ ನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ .

ಕಂದಾಯ ಬಾಕಿ ,ನೀರಿನ ತೆರಿಗೆ ಸೇರಿದಂತೆ ಸಾರ್ವಜನಿಕರು  ಕಟ್ಟಿದ್ದ ಲಕ್ಷಾಂತರ ರೂ ಗಳನ್ನು   ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ .ಕೇಶವ ಶಂಕರಪುರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ