udayanews

ಭಾನುವಾರ, ನವೆಂಬರ್ 6, 2022

ಅನಧಿಕೃತ ಕಟ್ಟಡ ನಿರ್ಮಾಣ : ದಾಖಲೆ ಸಲ್ಲಿಕೆಗೆ ಸೂಚನೆ

 


ಚಿಕ್ಕಮಗಳೂರು ನಗರದ ಹೊರವಲಯದ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಇರೋ ಆಶ್ರಯ ಕಾಲೋನಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡ ಪತ್ತೆಯಾಗಿದ್ದು ದಾಖಲೆ ಸಲ್ಲಿಸುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದಾರೆ .

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಆಯುಕ್ತ ಬಸವರಾಜ್ ನೇತತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ,ಮೇಲ್ನೋಟಕ್ಕೆ ಇದೊಂದು ಮಸಿದಿ ಎಂದು ತಿಳಿದು ಬಂದಿದ್ದು 3 ದಿನದೊಳಗೆ ಅಗತ್ಯ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ .

ಸೂಕ್ತ ದಾಖಲೆಗಳನ್ನು ನಿಗದಿತ ಸಮಯದಲ್ಲಿ ಒದಗಿಸದೆ ಇದ್ದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ .


ಪತ್ರಕರ್ತನ ಮೇಲೆ ಹಲ್ಲೆ ಖಂಡನೆ :ಶೃಂಗೇರಿಯ ಪತ್ರಕರ್ತ ರಾಘವೇಂದ್ರ ಮೇಲೆ ಶಾಸಕ ಟಿ ಡಿ ರಾಜೇಗೌಡ ಬೆಂಬಲಿಗರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ .

ಪ್ರಸನ್ನ ಶೆಟ್ಟಿ ಮತ್ತು ಶ್ರೀನಿವಾಸ್ ಶೆಟ್ಟಿ ಎಂಬಿಬ್ಬರು  ನಗರದ ಸೋಮೇಶ್ವರ ಹೋಟೆಲ್ ಒಂದರ ಬಳಿ ಹಲ್ಲೆ ಮಾಡಿದ್ದುಬಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ .

ರಾಘವೇಂದ್ರ ಮೇಲೆ ನಡೆದ ಹಲ್ಲೆಯನ್ನು ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಖಂಡಿಸಿವೆ .

ಶನಿವಾರ, ನವೆಂಬರ್ 5, 2022

ಆಪರೇಷನ್ ಭೈರ ಕಾರ್ಯಾಚರಣೆ ಸ್ಥಗಿತ ; ಸ್ಥಳೀಯರಲ್ಲಿ ನಿರಾಸೆ



ಮೂಡಿಗೆರೆ :ತಾಲ್ಲೂಕಿನ ಊರುಬಗೆ ಅರಣ್ಯ ಪ್ರದೇಶದಲ್ಲಿ ನರಹಂತಕ ಕಾಡಾನೆಯನ್ನು ಹಿಡಿದು ಸಾಗಿಸುವ  ಆಪರೇಷನ್ ಬೈರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆಗೆ ಬಂದಿದ್ದ 6 ದಸರಾ ಆನೆಗಳು ವಾಪಸ್ ತೆರಳಿದೆ. 
ಅಭಿಮನ್ಯುವಿಗೆ ಜ್ವರ ಭೇದಿ ಬಾಧಿಸಿದೆ. ಅಜ್ಜಯ್ಯ ಮತ್ತು ಗೋಪಾಲಸ್ವಾಮಿ ಆನೆಗೆ ಮದ ಬಂದಿದೆ. ಬೈರ ಮೂಡಿಗೆರೆ ತಾಲ್ಲೂಕಿನ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಸಕಲೇಶಪುರ ಅಥವ ಮಂಗಳೂರು ಅರಣ್ಯ ಭಾಗಕ್ಕೆ ತೆರಳಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.

 ಈ ಕಾರಣದಿಂದ ಕಾರ್ಯಚರಣೆ ಮಾಡಲು ಸಾಧ್ಯವಿಲ್ಲವೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಡಿಸಿಎಫ್ ಕ್ರಾಂತಿ  ತಿಳಿಸಿದ್ದಾರೆ.

ನಿರಾಶೆ :ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಿಗೆ ಲಗ್ಗೆ ಇಡುತ್ತಿದ್ದ  ಕಾಡಾನೆ ಈವರೆಗೆ ಹಲವರನ್ನು ಬಲಿ ತೆಗೆದುಕೊಂಡಿದ್ದು ಸಾಕಷ್ಟು ಬೆಳೆಯನ್ನು ಹಾನಿ ಮಾಡಿದೆ .

ಆನೆ ಹಿಡಿಯುವಂತೆ ಸ್ಥಳೀಯರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು , ಕಾರ್ಯಾಚರಣೆ ಆರಂಭವಾಗಿ ಸ್ಥಳೀಯರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಕಾರ್ಯಾಚರಣೆ ಸ್ಥಗಿತ ಕೊಂಡು ನಿರಾಶೆ ತಂದಿದೆ

ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದ ಆನೆ ಅಭಿಮನ್ಯುಗೆ ಅನಾರೋಗ್ಯ ;ಅಂಬಾರಿ ಹೊರುವ ಆನೆ ಬಳಕೆಗೆ ತಕರಾರು

 


ಕೊಟ್ಟಿಗೆಹಾರ:ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಊರುಬಗೆಯಲ್ಲಿ ಕಾಡಾನೆ ಸೆರೆಗೆ ಆಗಮಿಸಿರುವ ದಸರಾದಲ್ಲಿ ಅಂಬಾರಿ‌ ಹೊರುವ ಆನೆ ಅಭಿಮನ್ಯುವಿಗೆ ಅನಾರೋಗ್ಯ ಪ್ರಾರಂಭವಾಗಿದೆ.

 ಜ್ವರ ಹಾಗೂ ಬೇಧಿಯಿಂದಾಗಿ ಅಭಿಮನ್ಯು ಬಳಲುತ್ತಿದ್ದು ಆಪರೇಷನ್ ಭೈರ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಕಾರ್ಯಾಚರಣೆಗೆ ಬಂದಿರುವ  ಅಜಯ್, ಗೋಪಾಲಸ್ವಾಮಿ  ಆನೆಗಳಿಗೆ ಮದ ಬಂದಿರುವುದರಿಂದ ಅವುಗಳನ್ನು ಕಾರ್ಯಾಚರಣೆಗೆ ಬಳಸಲು ಅಸಾಧ್ಯವಾಗಿದೆ.

ಅಭಿಮನ್ಯು ಬಳಕೆಗೆ ಆಕ್ಷೇಪ :

ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾಡಾನೆ ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿಮನ್ಯು ಆನೆ ಈ ದೇಶದ ಆಸ್ತಿ. ಬುದ್ದಿವಂತ ಹಾಗೂ ವಿಶಿಷ್ಟ  ಆನೆಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವುದು ಸರಿಯಲ್ಲಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ .

ಊರುಬಗೆಯಲ್ಲಿ ಕಾಡಾನೆ ಸೆರೆಗೆ ಅಭಿಮನ್ಯು ವನ್ನು ಕರೆ ತಂದಿದ್ದು  ಅಭಿಮನ್ಯು ವಿಗೆ ಜ್ವರ ಹಾಗೂ ನಿರ್ಜಲೀಕರಣ ಪ್ರಾರಂಭವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.



ಶುಕ್ರವಾರ, ನವೆಂಬರ್ 4, 2022

ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ: ನ.೧೩ ರಂದು ಸಾರ್ವಜನಿಕ ಪ್ರವೇಶ ನಿರ್ಬಂಧ

 


ಚಿಕ್ಕಮಗಳೂರು : ಚಿಕ್ಕಮಗಳೂರು ತಾಲ್ಲೂಕು, ಐ.ಡಿ ಪೀಠ ಗ್ರಾಮದ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ನ . ೧೩ರಂದು  ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ .

 ಶ್ರೀರಾಮಸೇನಾ ಕಾರ್ಯಕರ್ತರು ವಾರ್ಷಿಕ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿರುವ   ಹಿನ್ನೆಲೆಯಲ್ಲಿ ಸಂಸ್ಥೆಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನ.೧೩ರ ಬೆಳಿಗ್ಗೆ ೬ ಗಂಟೆಯಿಂದ ನ.೧೪ರ ಬೆಳಿಗ್ಗೆ ೧೦ ಗಂಟೆಯವರೆಗೆ ಪ್ರವಾಸಿಗರು ಬರುವುದನ್ನು ನಿಷೇಧಿಸಿ ಹಾಗೂ ಲಾಂಗ್ ಚಾಸಿಸ್‌ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೆಶ್ ಆದೇಶಿಸಿದ್ದಾರೆ.


ನಿರಾಶೆ ಮೂಡಿಸಿದ ಸಿದ್ಧರಾಮಯ್ಯ ಭೇಟಿ ; ಮುಖಂಡರ ಟೀಕೆ


 

ಚಿಕ್ಕಮಗಳೂರು :ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರ ಭೇಟಿ ಕಾಂಗ್ರೆಸ್ ಪಾಳಯದಲ್ಲಿ ಹುರುಪು ಮೂಡಿಸುವ ಬದಲು  ಅಸಮಾಧಾನಕ್ಕೆ ಕಾರಣವಾಗಿದೆ .
ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಕ್ಷದ ಜಿಲ್ಲಾ ಮಟ್ಟದ ಪ್ರಮುಖರೊಂದಿಗೆ ಚರ್ಚಿಸುವ ಬದಲು ಏಕಾಂತದಲ್ಲೇ ಹೆಚ್ಚು ಕಾಲಹರಣ ಮಾಡಿದರು ಎನ್ನುವ ಆರೋಪ ಕೇಳಿಬಂದಿದೆ .
ಪ್ರತಿಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಜಿಲ್ಲೆಯ ಆಗುಹೋಗುಗಳ ಬಗ್ಗೆ ಪರಾಮರ್ಶೆ ನಡೆಸಿ ಮುಂದಿನ ಚುನಾವಣೆಯ ಸಿದ್ಧತೆಗಳ ಬಗ್ಗೆಯೂ ಸಮಾಲೋಚನೆ ನಡೆಸಬಹುದಿತ್ತು ಎನ್ನುವುದು ಹಲವರ ಅಭಿಪ್ರಾಯ .
ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದ ಅವರನ್ನು  ಭೇಟಿ ಮಾಡಲು ಸಾಕಷ್ಟು ನಾಯಕರಿಗೆ ಸಾಧ್ಯವಾಗಲೇ ಇಲ್ಲ .ಕೆಲವರಷ್ಟೆ ಭೇಟಿಮಾಡಿ ಇತರರು ಅತ್ತ ಸುಳಿಯದಂತೆ 'ಬೇಲಿ' ನಿರ್ಮಿಸಿದ್ದರು ಎನ್ನುವ ಆರೋಪವೂ ವ್ಯಕ್ತವಾಗಿದೆ .
ಪಕ್ಷದ ಕಚೇರಿಗೆ ಆಗಮಿಸದೆ ,ಪಕ್ಷದ ವಿವಿಧ ಘಟಕಗಳ ಮುಖಂಡರೊಂದಿಗೆ ಸಮಾಲೋಚನೆಯನ್ನೂ ಮಾಡದೆ  ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಎಡವಿದ್ದಾರೆ ಎನ್ನುವ ಟೀಕೆ ಕೇಳಿಬಂದಿದೆ .
ಅಧ್ಯಕ್ಷರ ವಿರುದ್ಧ ದೂರು : ಈ ನಡುವೆ ಪಕ್ಷದ ಅಧ್ಯಕ್ಷ ಅಂಶುಮಂತ್ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸದೆ ಏಕಪಕ್ಷೀಯವಾಗಿ ವರ್ತಿಸುತ್ತಿದೆ  ಎಂದು 1ಬಣ ಸಿದ್ಧರಾಮಯ್ಯನವರಲ್ಲಿ ದೂರು ಸಲ್ಲಿಸಿದೆ .
ತಮಾಷೆಯ ಸಂಗತಿಯೆಂದರೆ ಸಿದ್ಧರಾಮಯ್ಯನವರ ಚಿಕ್ಕಮಗಳೂರು ಭೇಟಿ ಸಾಕಷ್ಟು ಮುಖಂಡರಿಗೆ ಗೊತ್ತೇ ಇಲ್ಲ ಎನ್ನುವುದು

ಪರವಾನಗಿ ಇಲ್ಲದೇ ಜಲ್ಲಿ ಮತ್ತು ಎಂ ಸ್ಯಾಂಡ್ ಸಾಗಣೆ :12 ಲಾರಿಗಳು ವಶಕ್ಕೆ

 


ಶೃಂಗೇರಿ: ಪರವಾನಿಗೆ ಇಲ್ಲದೆ ಜಲ್ಲಿ ಮತ್ತು ಎಂಸ್ಯಾಂಡ್ ಸಾಗಿಸುತ್ತಿದ್ದ ಹನ್ನೆರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .

 ಎಸ್.ಕೆ.ಬಾರ್ಡರ್ ನಲ್ಲಿ ಪಿ.ಎಸ್.ಐ. ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೇ ಮತ್ತು ಸಿಬ್ಬಂದಿ 12 ಟಿಪ್ಪರ್ ಲಾರಿಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಲಾರಿಗಳಲ್ಲಿ ಜಲ್ಲಿ ಮತ್ತು ಎಂ ಸ್ಯಾಂಡ್ ನ್ನು  ಪರವಾನಗಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ.

 ಎಲ್ಲಾ 12 ಟಿಪ್ಪರ್ ಲಾರಿ ಮತ್ತು ಚಾಲಕರನ್ನು ವಶಕ್ಕೆ ಪಡೆದಿದ್ದು  ಶೃಂಗೇರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ .

 ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಖಾಂತರ ಲಾರಿ ಚಾಲಕರ ವಿರುದ್ಧ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟನೆ ತಿಳಿಸಿದೆ .

ಗುರುವಾರ, ನವೆಂಬರ್ 3, 2022

ಜಾಲಿ ಮೂಡಲ್ಲಿ ಸಿದ್ದರಾಮಯ್ಯ ಫುಲ್ ಖುಷ್ ಖುಷ್



ಚಿಕ್ಕಮಗಳೂರು :ಇಂದು  ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಜಾಲಿ ಮೂಡಲ್ಲಿ ಇದ್ದರು

ಸುದ್ದಿಗೋಷ್ಠಿಯಲ್ಲಿ ಖುಷಿ-ಖುಷಿಯಾಗೇ ಮಾತನಾಡಿದ ಸಿದ್ದರಾಮಯ್ಯನವರ  ಬಾಡಿ ಲಾಂಗ್ವೇಜ್ ಸೂಪರ್  ಆಗಿತ್ತು .
ಎರಡೂ ಕೈಗಳನ್ನ ತಲೆ ಹಿಂದಕ್ಕೆ ಕಟ್ಟಿ ಮಾತನಾಡುತ್ತಿದ್ದ ಅವರು ಎಲ್ಲಿಯೂ  ಗರಂ ಆಗದೆ ಕೆಲ ವೇಳೆ ಎರಡೂ ಕೈಗಳನ್ನೂ ಮೇಲೆಕ್ಕೆ ಎತ್ತಿ ಹ್ಯಾಪಿಯಾಗಿ ಮಾತನಾಡಿದ್ದು ವಿಶೇಷವಾಗಿತ್ತು .
ಕಾಫಿನಾಡ ವಾತಾವರಣ, ಸೌಂದರ್ಯಕ್ಕೆ ಮನ ಸೋತಂತೆ  ಇದ್ದ ಅವರು  130-150 ಸೀಟ್ ಗೆಲ್ತೇವೆ, ಮತ್ತೆ ಸಿಎಂ ಆಗ್ತೀನಿ ಅನ್ನೋ  ಖುಷಿಯಲ್ಲಿದ್ದಂತೆ  ಕಾಣಿಸಿತು  .ಇತ್ತೀಚೆಗೆ ನಡೆದ ರಾಹುಲ್ ಗಾಂಧಿ ಪಾದಯಾತ್ರೆ ಸಕ್ಸಸ್  ಆಗಿದ್ದು ಇದಕ್ಕೆ ಕಾರಣ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ
ಸಿದ್ದುಗೆ ಬೇರೆ ಏನಾದ್ರು ಶುಭಸಂಕೇತದ ಮುನ್ಸೂಚನೆ ಸಿಕ್ಕಿದ್ಯಾ, ಗೊತ್ತಿಲ್ಲ.ಆದರೆ, ಒಂದುಕಾಲು ಗಂಟೆಯ ಸುದ್ದಿಗೋಷ್ಠಿ ಬಿಂದಾಸ್ ಆಗಿ ಇದ್ದದ್ದು ಸುಳ್ಳಲ್ಲ .
ಮತ್ತೆ ಮುಖ್ಯಮಂತ್ರಿ :ಸುದ್ದಿಗೋಷ್ಠಿ ಮುಗಿಸಿ ಸಿದ್ದರಾಮಯ್ಯ ಹೊರಬರುತ್ತಿದ್ದಂತೆ ಬೆಂಬಲಿಗರು  ಮುಂದಿನ ಮುಖ್ಯಮಂತ್ರಿ ಸಿದ್ಧರಾಮಣ್ಣ ಎಂದು ಘೋಷಣೆ ಕೂಗಿದರು .
ನಾಯಕರಿಗೆ ಟಾಂಗ್ : ಸಿಟಿ ರವಿ ಎಂದರೆ ಬರೀ ಸುಳ್ಳು ಎಂದು ಟಾಂಗ್ ನೀಡಿದ್ದೆ ಅಲ್ಲದೆ , ಅಧಿಕಾರಕ್ಕೆ ಬಂದರೆ ನಾಗಮೋಹನ್ ದಾಸ್ ವರದಿ ಜಾರಿ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಸಚಿವ ಶ್ರೀರಾಮುಲೂ ರವರನ್ನೂ ಕುಕ್ಕಿದರು .
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು .